ಹಕ್ಕಿ ಹಾರುತಿದೆ ಗರಿ ಬಿಚ್ಚಿ
ಶಾಂತಿ ಸಂಕೇತದ ಬಿಳಿ ಹಕ್ಕಿ
ಬುವಿಯ ಬಂಧ ತೊರೆದು
ಇರದಿರಲಿಲ್ಲಿ ಪ್ರೀತಿ ವಿಶ್ವಾಸ
ಆ ಧರ್ಮ ಈಧರ್ಮ ವೆನುತ
ಹೊಡೆತ ಬಡಿತವು ಇಲ್ಲಿ ನಿತ್ಯ
ಸ್ವಾರ್ಥ ಭೋಗ ಲಾಲಸೆಗಳಲಿ
ಶಾಂತಿಗೆ ನೆಲೆಯಿಲ್ಲವಿದು ಸತ್ಯ.
ರಕ್ತಪಿಪಾಸುಗಳಿವರು ನೆತ್ತರ
ಹೊಳೆಹರಿದರೂ ತೀರದ ದಾಹ
ಅಕ್ಕರೆಯ ಅಂತಃಕರಣ ಒಳಗಿಲ್ಲ
ಬಡಜೀವಗಳಿಗೆ ಬೆಲೆಯೇ ಇಲ್ಲ.
ಮಾಡುವರು ಹತ್ತಾರು ಹೋರಾಟ
ಇದು ಬರಿದೆ ರಾಜಕೀಯ ಗುದ್ದಾಟ
ಅಧಿಕಾರ ಮದತುಂಬಿದ ಹಾರಾಟ
ಸಿಗದ ಸೌಲಭ್ಯಕೆ ರೈತರ ಗೋಳಾಟ.
ಒಳಗೊಳಗೆ ಕಶ್ಮಲವ ತುಂಬುತ
ನಡೆವರು ದುರ್ಗಂಧವ ಬೀರುತ್ತ
ಸ್ನೇಹಸೌಹಾರ್ದ ಎಂದುಸುರುತ್ತ
ಮಾಡುವರು ಕಪಟ ಹೀನ ಕೃತ್ಯ.
ಆಳುವವರ ಮನದಿ ಮಮತೆ
ಆತ್ಮಾರ್ಥತೆಯು ಇಲ್ಲದಿರಲು
ಹಾರಿಹೋಗುತಿದೆ ಬಿಳಿ ಹಕ್ಕಿ
ನೆಲೆಸಲಾರದೆ ಕಪಟಮನದೊಳಗೆ.
-ಅನ್ನಪೂರ್ಣ, ಬೆಜಪ್ಪೆ
Photo Credit: thomasschoenberger.com
ಚೆಂದದ ಕವಿತೆ
ReplyDelete