ಗುಣಾಜೆ ಚಂದ್ರಮ ೬ - ಚುಟುಕುಗಳು




೧. ಕೊಂದ ಪಾಪ ತಿಂದು ಪರಿಹಾರ
ಜೀವ ಕೊಡಲರಿಯದವಗೆ ಕೊಲುವ
ಸಾವ ಅನ್ಯರಿಗೆ ತಂದು ರಕ್ತ ಚೆಲ್ಲುವ
ಹಕ್ಕಿಲ್ಲ, ಇದು ಸಲ್ಲ, ಕೊಂದವನ ಪಾಪ
ಅವನು ತಿಂದೇ ಸಿದ್ಧ, ಗೊತ್ತಿಲ್ಲವಗೆ ಪಾಪ!

೨. ಭಾಗವತರಿಗೆ ಶ್ರದ್ಧಾಂಜಲಿ

ಭಾಗವತ ಶ್ರೀಧರರಾಯರ ದೇಹವು
ಅಳಿದು ಹೋದರೂ ಅವರ ಕಂಚಿನ ಕಂಠವು
ಉಳಿದು ಕೇಳುವುದು ಶತಶತಮಾನ ಕಾಲ
ಅವರ ಸವಿ ನೆನಹು ತಂಪನೀವ ತರು ಆಲ.

೩. ಕವಿಗೆ ಪ್ರೀತಿಯ ಕರೆ
ಪ್ರಶಸ್ತಿ ಪ್ರಶಂಸೆಗಾಗಿ ಕವನ ಬರೆಯದಿರು
ಎಚ್ಚರದಿ ಮನಮೆಚ್ಚುವಂದದಿ ಬರೆಯುತಿರು
ನಿನ್ನ ರಚನೆಯಲಿದ್ದರೆ ಕಸುವದು ಚಿರಸ್ಥಾಯಿ
ಇಲ್ಲದಿರೆ ಕಳಚಿ ಉದುರುವ ಹೀಚು ಕಾಯಿ!

೪. ಹನಿಗವನ ಗೋಷ್ಠಿ

ಎಲ್ಲ ಕವಿಗಳು ಓದಿದರು ಅಂದು
ತಮ್ಮ ತಮ್ಮ ಮೂರು ಮೂರು ಹನಿ
ಕವನಗಳನ್ನು, ಉತ್ಸಾಹದಿಂದ ಬಂದು
ಮುಂದೆ ಕೂತಿದ್ದವರ ಮುಖದಲ್ಲಿ ಮೂಡಿತ್ತು ಹನಿ

೫. ಭತ್ತೆ-ಲತ್ತೆ

ಸರ್ಕಾರಿ ನೌಕರಿಗೆ ಸೇರಿದರೆ
ಬೆಲೆ ಏರಿಕೆ ಹೆಚ್ಚಾದರೆ
ಸಿಗುವುದು ತುಟ್ಟಿ ಭತ್ತೆ
ಕತ್ತೆಯ ಹಿಂದೆ ಹೋದರೆ
ಅದನು ಕೆಣಕಿದರೆ
ಕೂಡಲೇ ಸಿಗುವುದು ಲತ್ತೆ!

                             -ಗುಣಾಜೆ ರಾಮಚಂದ್ರ ಭಟ್

ಗುಣಾಜೆ ಚಂದ್ರಮ - ೫ ನ್ನು  ಓದಲು ಮುಂದಿನ ಲಿಂಕ್ ಗೆ ಭೇಟಿ ನೀಡಿ - ಚಂದ್ರಮ ೫


Author image
About the Author

ಹೆಸರು : ಶ್ರೀ ಗುಣಾಜೆ ರಾಮಚಂದ್ರ ಭಟ್.
▪ಶ್ರೀಯುತರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ಈಗ ಸಾಹಿತ್ಯದೊಂದಿಗೆ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ. ಅದಲ್ಲದೆ ಚುಟುಕ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಕ್ರಿಯ ಸದಸ್ಯರಾಗಿರುವ ಇವರು 2014 ರಲ್ಲಿ "ಎದೆಯ ದನಿ" ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಇದರ 300 ಪ್ರತಿಗಳನ್ನು ಕರ್ನಾಟಕ ರಾಜ್ಯ ಗ್ರಂಥಾಲಯ ಇಲಾಖೆಯು ಆಯ್ಕೆ ಮಾಡಿಕೊಂಡುದು ಇವರ ಹಿರಿಮೆಗೊಂದು ಗರಿ. ಅತ್ಯುತ್ತಮ ಶಿಕ್ಷಕರಾಗಿದ್ದ ಇವರು 2014ನೇ ಸಾಲಿನ ದಕ್ಷಿಣಕನ್ನಡ ಜಿಲ್ಲಾ ಮಟ್ಟದ "ಅತ್ಯುತ್ತಮ ಜಿಲ್ಲಾ ಶಿಕ್ಷಕ" ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕವಿಗೊಷ್ಟಿಗಳಲ್ಲಿ ಭಾಗವಹಿಸಿರುವ ರಾಮಚಂದ್ರ ಭಟ್ಟರು ಕನ್ನಡ, ಹವಿಗನ್ನಡ ಹಾಗೂ ತುಳು ಭಾಷೆಗಳಲ್ಲಿ ತಮ್ಮದೇ ಶೈಲಿಯ ಸಾಹಿತ್ಯ ಸಿಂಚನವನ್ನು ಪಸರಿಸುತ್ತಿದ್ದಾರೆ. ಇದೀಗ ನಮ್ಮ ಈ ಜಾಲದಲ್ಲಿ "ಗುಣಾಜೆ ಚಂದ್ರಮ" ಎಂಬ ಹೆಸರಿನಲ್ಲಿ ಅವರ ಚುಟುಕಗಳನ್ನು ನೀವು ಓದಬಹುದು...
ವಿಳಾಸ:
ಕವನ ಸದನ
ದೇರಳಕಟ್ಟೆ ಅಂಚೆ
ಬೆಲ್ಮ ಗ್ರಾಮ
ಮಂಗಳೂರು ತಾಲೂಕು
ದ.ಕ 575018
ದೂರವಾಣಿ : +919743902522

Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.