ಸುಮ್ಮನೆ ಕರೆ ಮಾಡಿದ್ದಂತೆ!


ಹೀಗೂ ಆಗುವುದುಂಟೇ?
        ಸಮಾರು 3 ವರ್ಷಗಳ ಹಿಂದೆ... ರಾತ್ರಿ ಅಂದು ಸರಿಸುಮಾರು 8 ಗಂಟೆಯ ಸಮಯ. ಎಂದಿನಂತೆಯೇ ಊಟದ ಹೊತ್ತು. ಮನೆಯಲ್ಲಿ ಅಮ್ಮನ ರುಚಿಯಾದ ಅಡುಗೆಯನ್ನುಂಡು ಸ್ವಲ್ಪ ತಂಪುಗಾಳಿಗೆ ಮೈಯ್ಯೊಡ್ಡಿ ನಿಲ್ಲುವ ಮನಸಾಗಿ ಮನೆಯ ಹೊರಬಂದೆ... ಸರ್ವೇಸಾಮಾನ್ಯವಾಗಿ ಮನೆಯ ಹೊರಬದಿಯ ಎಡಭಾಗದಲ್ಲಿ ನನ್ನ ಪಾದರಕ್ಷೆಯನ್ನು ಜೋಡಿಸಿಡುವ ಕ್ರಮ ನನ್ನದು. ಅಂದು ರಾತ್ರಿ ಕರೆಂಟ್ ಇಲ್ಲದೇ ಇದ್ದ ಕಾರಣ ಬರೀ ಕತ್ತಲು. ಚಂದ್ರನ ಬೆಳಕೊಂದೇ ಬೆಳಗಿದ್ದ ಅಂದು ಮಂಜುದೀಪ ಉರಿದಂತಿತ್ತು. ಕತ್ತಲೆಯಲ್ಲಿಯೇ ನಾನು ಪಾದರಕ್ಷೆಯನ್ನು ಹಾಕಲು ಮುಂದಾದೆ. ಎಡಕಾಲನ್ನು ಪಾದರಕ್ಷೆ ಆವರಿಸುವಷ್ಟರಲ್ಲಿ ಕರೆಂಟ್ ಬಂತು ನೋಡಿ. ಕರೆಂಟ್ ಬಂದ ಖುಷಿಯಲ್ಲಿಯೇ ಇನ್ನೊಂದು ಕಾಲನ್ನು ಪಾದರಕ್ಷೆ ಆವರಿಸುವ ಸಂದರ್ಭ... ಕಾಕತಾಳೀಯವೆಂಬಂತೆ ನನ್ನ ಸೋದರಮಾವನ ಕರೆ ಬಂತು. ನನ್ನ ಮೊಬಲಿನಲ್ಲಿ ರಿಂಗ್ ಟೋನ್ ಅಷ್ಟೊಂದು ಎಫೆಕ್ಟಿವ್ ಇದ್ದ ಕಾರಣ ಪಕ್ಕನೆ ಕಿವಿಹೊಕ್ಕಿತು. ಮೊಬೈಲನ್ನು ಮನೆಯೊಳಗೆ ಇಟ್ಟಿದ್ದ ಕಾರಣ ಚಪ್ಪಲಿಯನ್ನು ಅಲ್ಲೇ ಕಾಲಲ್ಲಿ ಒದ್ದು ಮನೆಯೊಳಗೆ ಇನ್ನೇನು ಹೋಗಬೇಕು ಅನ್ನುವಷ್ಟರಲ್ಲಿ ಬಲಕಾಲನ್ನು ಅಲಂಕರಿಸಬೇಕಿದ್ದ ಪಾದರಕ್ಷೆಯ ಒಳಗಿನಿಂದ ವಿಷಪೂರಿತ ಕನ್ನಡಿಹಾವು ನಿಧಾನಕ್ಕೆ ತಲೆಯನ್ನು ಹೊರಕ್ಕೆ ತಳ್ಳಿ ನನ್ನ ಕಣ್ಣಿಗೆ ವಿಷವೆರಚಿದಂತೆ ದಿಗ್ಭ್ರಾಂತಿ ಮೂಡಿಸಿತು. ಗಾತ್ರದಲ್ಲಿ ಚಿಕ್ಕದಾದರೂ ಚಟ್ಟಕ್ಕೇರಿಸುವಷ್ಟು ಶಸ್ತ್ರಪ್ರಯೋಗ(ವಿಷ) ಮಾಡಬಲ್ಲ ಸಾಮರ್ಥ್ಯ ಹೊಂದಿದ್ದ ಹಾವದು. ಅಬ್ಬಬ್ಬಾ... ನನಗೆ ಒಂದೆಡೆಯಲ್ಲಿ ಆಶ್ಚರ್ಯ ಇನ್ನೊಂದೆಡೆ ಭಯ-ಮತ್ತೊಂದೆಡೆ ಉಸಿರೆಳೆತ; ಅಮ್ಮನನ್ನು ಅಪ್ಪನನ್ನು ತಂಗಿಯನ್ನು ಎಲ್ಲರನ್ನೂ ಕೂಗಿ ಕರೆದೆ. ಅವರು ಬರುವುದನ್ನು ಕಂಡು ಹಾವಿಗೆ ಭಯವಾಯಿತೋ ಏನೋ, ಹಾವು ಅಲ್ಲಿಂದ ಪಲಾಯನಕ್ಕಿಳಿಯಿತು. ಅಷ್ಟಾಗುವಾಗ ಮಾವನ ಕರೆಯ ಶಬ್ಧ ನಿಂತು ಮತ್ತೊಮ್ಮೆ ಕರೆ ಬಂತು. ಕರೆ ಸ್ವೀಕರಿಸಿ ಮಾತಾಡಿದವನೇ ಮಾವ ಅಂದರು "ಎಂತಿಲ್ಲೆ ಮರೆ.... ಸುಮ್ಮನೆ ಮಾಡಿದ್ದು ಆನು. ಎಂತ ಬಿಸಿಯಾ?...."(ಹವ್ಯಕಕನ್ನಡ)... ನೋಡಿ ಮಾರ್ರೆ ಸುಮ್ಮನೆ ಕರೆ ಮಾಡಿದ್ದಂತೆ!!! ಮತ್ತೆ ಸ್ವಲ್ಪ ಹೊತ್ತು ಮಾತನಾಡಿ ಕರೆ ನಿಲ್ಲಿಸಿದೆ. ಅಪ್ಪ ಅಮ್ಮ ತಂಗಿ ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ನಾನು ಅವರನ್ನು ನೋಡುತ್ತಲೇ ಮತ್ತೆ ಹೊರನಡೆದೆ. ಕೆಂಪಾಯಿತು ನೋಡಿ ಅಮ್ಮನ ಮುಖ... ಬೈದು ಹೋಗಿ ಮಲಗುವಂತೆ ಆಜ್ಞೆಯಿತ್ತರು. ಅಮ್ಮನ ಮಾತಿಗೆ ಎದುರುಂಟೇ??? ಹೋಗಿ ಮಲಗಿದೆ. ಮಲಗಿದ್ದು ದೇಹ ಮಾತ್ರ, ಮನಸಲ್ಲ. ನಿದ್ದೆಯೆಲ್ಲಿಂದ ಮಾರ್ರೆ ಅಷ್ಟೆಲ್ಲಾ ಆದಮೇಲೆ. ನನಗೆ ಏನೆಲ್ಲಾ ಯೋಚನೆಗಳು.
ಅಂದು ಮಾವ ನನ್ನ ಪಾಲಿನ ಮೃತ್ಯುಂಜಯನಾಗಿ ಬಂದದ್ದಂತೂ ಸತ್ಯ... ಇಲ್ಲದೇ ಹೋದರೆ ಏನಾಗುತ್ತಿತ್ತೋ ಊಹಿಸಲು ನನಗೆ ಊಟ ಮಾಡಿದ್ದೆಲ್ಲಾ ಆಗ ಕರಗಿ ಹೋಗಿತ್ತು....
ಬಿದ್ದು ಎದ್ದು ಇದ್ದ ಪೆದ್ದನಂತೆ ನಾನಂದು ಮಲಗಿದ್ದೆ.
ಒಮ್ಮೆ ಯೋಚಿಸಿ ಅಂತೆ...
ನನ್ನ ಮಾವನ ಕರೆ ಬರದೇ ಇರುತ್ತಿದ್ದರೆ?
ಬಲಗಾಲಿನ ಪಾದರಕ್ಷೆ ನನ್ನ ಬಲಗಾಲನ್ನು ಅಲಂಕರಿಸುತ್ತಿದ್ದರೆ? ಆ ಹಾವು.........
ಈಗ ನಾನು ಕಥೆ ಹೇಳುತ್ತಿರಲಿಲ್ಲ ಅಷ್ಟೇ!!!!
ನೀವು ಈಗ ಇದನ್ನು ಓದುತ್ತಿರಲಿಲ್ಲ ಅಷ್ಟೇ!!!!
ಇದನ್ನೆಲ್ಲಾ ವಿಮರ್ಶಿಸುವಾಗ ನನಗನಿಸುವುದು-
ಹೌದು...
ಹೀಗೂ ಆಗುವುದುಂಟು.

ಸಾರಾಂಶ-
ಅವರವರ ಹಣೆಯಲ್ಲಿ ಏನಿದೆಯೋ ಅದೆ ಅವರ ಬದುಕನ್ನು ಹೆಣೆಯುತ್ತದೆ.
ಕೆಲವು ವ್ಯಕ್ತಿಗಳು, ಸಂದರ್ಭಗಳು ಅದಕ್ಕೆ ಪೂರಕವಾಗಿರುತ್ತದೆ.
ಒಳ್ಳೆಯ ಕೆಲಸಗಳನ್ನು ಮಾಡುವ ಮನಸ್ಸು ನಾವೇ ಮಾಡಬೇಕು. ಅದನ್ನು ವಿಧಿಯೇ ಮುನ್ನಡೆಸುತ್ತದೆ.
                                        
                                                         -ಶ್ರೀಸುತ



Please share and support me

No comments:

Post a Comment

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.