ಗೆಳತಿ ನೀ ಅಬಲೆಯಲ್ಲ


ನೆಲದೆಡೆಗೆ ದೃಷ್ಟಿ ಹರಿಸದೆ
ತಲೆಯೆತ್ತಿ ಕಂಗಳನೆ
ದಿಟ್ಟಿಸಿ ನೋಡು ಗೆಳತಿ ನೀನು

ನಾ ಅಬಲೆಯಲ್ಲ ನಿರ್ಭಯೆ
ಎಂದು ಜಗಕೆ ಸಾರು ನೀನು
ಏಕೆಂದರೆ ನೀನು ಸ್ತ್ರೀಯಾಗಿರುವೆ

ಶಕ್ತಿ ಸ್ವರೂಪಿಣಿಯು ನೀನು
ಮಮತಾಮಯಿ ಮಾತೆಯೂ ನೀನೇ
ನೋವು ನೀಡುವವರನೂ ಹೃದಯದಲಿಟ್ಟು
ಪೂಜಿಸುವ ಒಲವಿನ ಜಲಧಿಯೂ ನೀನಲ್ಲವೇ

ಪುರಾಣೇತಿಹಾಸಗಳಲಿ ನಿನ್ನ ಕಥೆಗಳು
ಸಾವಿರಾರಿವೆ ಗೆಳತೀ
ಬಿಸಿಲಿಗೆ ಕರಗುವ ಮಂಜಲ್ಲ ನೀನು
ಕ್ಷಣದಲ್ಲೇ ಒಡೆದು ಕಣ್ಮರೆಯಾಗುವ
ನೀರ್ಗುಳ್ಳೆಯಲ್ಲ

ಅಂಬೆಯಾಗಿ ಭೀಷ್ಮನನು ಶರಶಯ್ಯೆಗೆ
ಏರಿಸಿದವಳು ನೀನೇ
ತನ್ನ ಶಪಥದ ಮೂಲಕ ಕುರುವಂಶವ
ನಾಶಗೈದ ದ್ರೌಪದಿಯು ನೀನಲ್ಲವೇ

ಪುತ್ರಶೋಕದ ತಾಪದಲಿ ಶಾಪವಿತ್ತು
ಯದುಕುಲವನೇ ನಿರ್ನಾಮಗೈದ
ಗಾಂಧಾರಿಯೂ ನೀನೇ ಗೆಳತೀ

ಆದರೂ ತನ್ನದಲ್ಲದ ತಪ್ಪಿಗೆ
ಶಿಲೆಯಾಗಿ ಹೋದೆಯಲ್ಲಾ...
ಪತಿಯೊಡನೆ ವನವಾಸಕೆ ತೆರಳಿದರೂ
ಕೊನೆಗೊಬ್ಬ ರಜಕನ ಮಾತಿಗೆ
ಬಲಿಯಾಗಿ ಅಡವಿ ಪಾಲಾದೆಯಲ್ಲಾ..

ಗೆಳತೀ... ಏಕೆಂದರೆ ನೀನು ಹೆಣ್ಣು
ಇಂದು ಕೂಡಾ ಶೋಷಣೆಗೊಳಗಾಗುತಿರುವೆ
ಪತಿ ಪುತ್ರ ಬಂಧು ಬಾಂಧವರಿಂದ

ದಿಟ್ಟೆ ಧೀರೆ ಶಕ್ತಿ ಚೈತನ್ಯ ನೀನೆಂದು
ಹೊಗಳಿಸಿಕೊಂಡರೂ ದಮನಿಸಲ್ಪಡುತಿರುವೆ ನೀನು

ನಿನ್ನಂತರಂಗದತ್ತ ದೃಷ್ಟಿ ಹರಿಸು ಗೆಳತೀ
ನಿನ್ನ ಸುತ್ತಲಿರುವ ಅದೃಶ್ಯ ಕೋಟೆಗಳನು
ಕಿತ್ತೆಸೆದು ಮುನ್ನುಗ್ಗು ನೀನು

ಏಕೆಂದರೆ ನೀನು ದೇವಿಯಾಗಿರುವೆ
ನಿನ್ನನು ಮೂಲೆಗಟ್ಟುತಿರುವ ಅಸುರರನು
ದುರ್ಗೆಯಾಗಿ ಎದುರಿಸು ನೀನು

ನಲಿವ ಪ್ರಕೃತಿಯೂ ಜೀವದಾಯಿನಿ
ಪೃಥ್ವಿಯೂ ನೀನಲ್ಲವೇ
ಕುಸಿದು ಹೋಗದಂತೆ ಎದ್ದು ನಿಲ್ಲು
ಗೆಳತಿ ನೀನು

ಏಕೆಂದರೆ ನೀನು ಅಬಲೆಯಲ್ಲ
ನಿರ್ಭಯೆಯಾಗಿರುವೆ...

-ಪ್ರಸನ್ನಾ ವಿ ಚೆಕ್ಕೆಮನೆ

Photo Credit: Pinterest

Author image
About the Author
ಹೆಸರು:ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ.
▪ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಇವರು ಕೇರಳದ ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದಲ್ಲಿ ವಾಸವಾಗಿದ್ದು ಕನ್ನಡ, ಮಲಯಾಳಮ್, ಹವಿಗನ್ನಡ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡಿದವರು. ಗೃಹಿಣಿಯಾಗಿ ಮನೆಯಂಗಳವನ್ನು, ಬರಹಗಾರ್ತಿಯಾಗಿ ಮನದಂಗಳವನ್ನು ಬೆಳಗಿಸಿದ ಇವರು ತಮ್ಮದೇ ಶೈಲಿಯ ಬರವಣಿಗೆಯಲ್ಲಿ ಸಾಗುತ್ತಿದ್ದಾರೆ. 2014ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಇದರ ಸಹಕಾರದೊಂದಿಗೆ "ಇನಿದನಿ" ಎಂಬ ಕವನ ಸಂಕಲನವನ್ನು ಹೊರತಂದಿದ್ದಾರೆ. ಅಲ್ಲದೇ ಇವರು ಬರೆದ "ನನ್ನ ಕೃಷಿ" ಎಂಬ ಕವನವು ಕೇರಳ ಸರಕಾರದ ಎರಡನೇ ತರಗತಿಯ ಕನ್ನಡ ಪಠ್ಯಪುಸ್ತಕಕ್ಕೆ ಆಯ್ಕೆಯಾಗಿರುವುದು ಇವರ ಸಾಹಿತ್ಯ ಜಾತ್ರೆಗೊಂದು ಮೆರುಗು. 2010ರಲ್ಲಿ ಕೊಡಗಿನ ಗೌರಮ್ಮ ಸ್ಮಾರಕ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, 2012ರಲ್ಲಿ ಒಪ್ಪಣ್ಣ.ಕಾಮ್ ನ ಕಥಾಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಚುಟುಕು ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ 2014ರಲ್ಲಿ ತೃತೀಯ ಹಾಗೂ 2015ರಲ್ಲಿ ಪ್ರಥಮ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಇವರ ಹಲವಾರು ಲೇಖನಗಳು, ಕಥೆ-ಕವಿತೆಗಳು ಉದಯವಾಣಿ, ಹೊಸದಿಗಂತ, ವಿಜಯ ಕರ್ನಾಟಕ, ಮಂಜುವಾಣಿ, ಕನ್ನಡ ಕೈರಳಿ, ಬಾಲಮಂಗಳ, ಮಂಗಳ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಕಥೆ-ಲೇಖನ ಹಾಗೂ ಕವಿತೆಗಳನ್ನು ನಮ್ಮ ಜಾಲತಾಣದಲ್ಲಿ ಓದಬಹುದು.

Please share and support me

3 comments:

  1. ಪುರಾಣ ಇತಿಹಾಸಗಳ ಉದಾಹರಣೆಗಳೊಂದಿಗೆ,ಹೆಣ್ಣು ಅಬಲೆಯಲ್ಲ ಎಂಬ ದೈರ್ಯ ನೀಡುವ ಕವನ ಉತ್ತಮವಾಗಿ ಮೂಡಿ ಬಂದಿದೆ
    ಶ್ರೀಕೃಷ್ಣ ಶರ್ಮ ಹಳೆಮನೆ

    ReplyDelete
  2. ಸೂಪರ್ ಕವನ ಪ್ರಸನ್ನ

    ReplyDelete
  3. ಪುರಾಣ ಇತಿಹಾಸಗಳ ಉದಾಹರಣೆಗಳೊಂದಿಗೆ,ಹೆಣ್ಣು ಅಬಲೆಯಲ್ಲ ಎಂಬ ದೈರ್ಯ ನೀಡುವ ಕವನ ಉತ್ತಮವಾಗಿ ಮೂಡಿ ಬಂದಿದೆ

    ReplyDelete

ನಿಮ್ಮ ಅನಿಸಿಕೆಗಳು ಅತ್ಯಮೂಲ್ಯವಾಗಿದ್ದು ಅಭಿಪ್ರಾಯಗಳನ್ನು Comment Box ನಲ್ಲಿ ಬರೆದು ಪ್ರೋತ್ಸಾಹಿಸಿ. Do not spam.